ಕಾರ್ಕಳ :ಅಕ್ಟೋಬರ್ 09 : ದ್ರಶ್ಯ ನ್ಯೂಸ್ : ರವಿವಾರ ಅಮೆರಿಕದ ನ್ಪೋಕೆನ್ನಲ್ಲಿ ನಡೆದ ಬಿಡಬ್ಲ್ಯೂ ಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಬಾಲಕರ ಸಿಂಗಲ್ಸ್ ನಲ್ಲಿ ಭಾರತ ತಂಡದ ಆಟಗಾರ ಕಾರ್ಕಳ ಮೂಲದ ಆಯುಷ್ ಶೆಟ್ಟಿ ಕಂಚಿನ ಪದಕಕ್ಕೆ ಗೆದ್ದಿದ್ದಾರೆ .
ರವಿವಾರ ನಡೆದ ನಾಲ್ವರ ಘಟ್ಟದ ಸೆಮಿಫೈನಲ್ನಲ್ಲಿ ಇಂಡೋನೇಶ್ಯಾದ ಆಲ್ವಿ ಫಹಾನ್ ಅವರಿಗೆ ಮೊದಲ ಸುತ್ತಿನಲ್ಲಿ ಪ್ರಬಲ ಪೈಪೋಟಿ ನೀಡಿದರಾದರೂ ಅಂತಿಮವಾಗಿ 21-18, 21-14ರಿಂದ ಸೋಲು ಅನುಭವಿಸಿದರು. ಈ ಮೂಲಕ ಅವರು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.ಭಾರತದಿಂದ ತೆರಳಿದ 16 ಮಂದಿ ಕ್ರೀಡಾಪಟುಗಳ ಪೈಕಿ ಆಯುಷ್ ಮಾತ್ರವೇ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಯುಷ್ ಅವರು ಕಾರ್ಕಳ ಸಾಣೂರಿನ ಕೃಷಿಕ ಪೋಷಕ ರಾಮ್ಪ್ರಕಾಶ್, ಶಾಲ್ಮಲಿ ದಂಪತಿಯ ಪುತ್ರ. ಹಳ್ಳಿಯ ಮನೆಯಂಗಳದಲ್ಲಿ ಹವ್ಯಾಸಿಯಾಗಿ ಆಟವಾಡುತ್ತ ಬ್ಯಾಡ್ಮಿಂಟನ್ನಲ್ಲಿ ತೊಡಗಿಸಿಕೊಂಡು ಬೆಳೆದ ಬಾಲಕ ಇಂದು ಬಿಡಬ್ಲ್ಯೂ ಎಫ್ ಜೂನಿಯರ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಲ್ಲದೆ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಕಂಚಿನ ಪದಕ ಗಳಿಸಿ ಸಾಧನೆ ತೋರಿದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರು 3ನೇ ತರಗತಿಯಿಂದ ತರಬೇತಿ ಪಡೆದಿದ್ದರು.
ಅಮೆರಿಕ ಬಿಡಬ್ಲ್ಯೂ ಎಫ್ ಜೂನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಪೂರ್ವಭಾವಿಯಾಗಿ ಜುಲೈಯಲ್ಲಿ ಆಯ್ಕೆ ಟ್ರಯಲ್ಸ್ ನಡೆದಿತ್ತು. ಎರಡು ಬಾರಿ ಅಂಡರ್ – 19 ವಯೋಮಿತಿಯಲ್ಲಿ ಚಾಂಪಿಯನ್ ಆಗಿದ್ದ ಆಯುಷ್ ಟ್ರಯಲ್ಸ್ನಲ್ಲಿ ಅಗ್ರಸ್ಥಾನ ಪಡೆದು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು.