ಮೈಸೂರು :ಅಕ್ಟೋಬರ್ 07: ಜಾತಿ ಗಣತಿ ಸಮಾಜವನ್ನು ವಿಭಜಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ನಂತ್ರ, ಕರ್ನಾಟಕದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಡ ಹೆಚ್ಚಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ವರದಿ ಸಲ್ಲಿಸೋದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ಜಾತಿಗಣತಿ ವರದಿ ಸಮಾಜಕ್ಕೆ ಮಾರಕವಲ್ಲ, ಸಮಾಜವನ್ನು ವಿಭಜಿಸೋದೂ ಇಲ್ಲ ಅಂತ ಸಿಎಂ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.
ಮೈಸೂರಿನ ಮಂಡಕಹಳ್ಳಿ ಏರ್ಪೋರ್ಟ್ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನವೆಂಬರ್ ತಿಂಗಳಲ್ಲಿ ಜಾತಿಗಣತಿ ವರದಿ ಕೈ ಸೇರುವ ನಿರೀಕ್ಷೆಯಿದೆ. ಜಾತಿಗಣತಿ ವರದಿ ಸಲ್ಲಿಸಿದ ಬಳಿಕ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಕಾಂತರಾಜು ಅಧ್ಯಕ್ಷರಾಗಿದ್ದಾಗ ಮುಖ್ಯಮಂತ್ರಿಯಾಗಿದ್ದಂತ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಿದ್ದರು. ಆದರೇ ಸಿಎಂ ಆಗಿದ್ದಂತ ಕುಮಾರಸ್ವಾಮಿ ಆ ವರದಿಯನ್ನು ಸ್ವೀಕರಿಸಿರಲಿಲ್ಲ. ಹೊಸ ಅಧ್ಯಕ್ಷರಿಗೆ ಕಾಂತರಾಜು ವರದಿಯನ್ನು ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಿದರು.
ಜಾತಿಗಣತಿ ಸಮಾಜಕ್ಕೆ ಮಾರಕವಲ್ಲ. ಅದು ಸಮಾಜವನ್ನು ವಿಭಜಿಸೋದು ಇಲ್ಲ. ಯಾವ ಸಮುದಾಯದವರು ಎಷ್ಟು ಇದ್ದಾರೆ ಎಂಬ ಅಂಕಿ ಅಂಶದ ಮಾಹಿತಿಯನ್ನು ನೀಡಲಿದೆ. ಆ ಆಂಕಿ ಅಂಶಗಳ ಆಧಾರದ ಮೇಲೆ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಅಭಿವೃದ್ಧಿ ಮಾಡೋದಕ್ಕೆ ಇದು ಅವಶ್ಯಕವಾಗಲಿದೆ ಎಂದು ತಿಳಿಸಿದರು.