ಬೆಂಗಳೂರು: ಸೆಪ್ಟೆಂಬರ್ 27: ದೃಶ್ಯ ನ್ಯೂಸ್ : ಸ್ವಚ್ಛ ಆಸ್ಪತ್ರೆ–ನಮ್ಮ ಆದ್ಯತೆ ಅಭಿಯಾನದಡಿ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಈ ಕಾರ್ಯಕ್ಕೆ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಮಾಜದ ಎಲ್ಲಾ ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಅಂತ್ಯೋದಯ ಮಾದರಿಯಲ್ಲಿ ನೀಡಲು ‘ಆಯುಷ್ಮಾನ್ ಭವ’ ಅಭಿಯಾನವನ್ನು ಕೇಂದ್ರ ಸರ್ಕಾರ ವಿನ್ಯಾಸ ಮಾಡಿದೆ. ‘ಸ್ವಚ್ಛ ಆಸ್ಪತ್ರೆ–ನಮ್ಮ ಆದ್ಯತೆ’ ಅಭಿಯಾನದಡಿ ರಾಜ್ಯದ ಎಲ್ಲಾ ಹಂತಗಳ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಅಭಿಯಾನದಡಿ ಆರೋಗ್ಯ ಸಂಸ್ಥೆಯಲ್ಲಿ ಇರುವ ಅನುಪಯುಕ್ತ ಸಾಮಗ್ರಿಗಳು, ಪರಿಕರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಆವರಣದ ಗೋಡೆಗಳ ಸ್ವಚ್ಛತೆ, ಅನುಪಯುಕ್ತ ಗಿಡಗಂಟಿಗಳ ತೆರವು, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಸುಧಾರಣೆ, ರೋಗವಾಹಕ ಮೂಲಗಳ ನಾಶ ಹಾಗೂ ಸೋಂಕು ನಿಯಂತ್ರಣಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗುವುದು. ಕೇಂದ್ರಗಳ ಆವರಣದಲ್ಲಿ ಔಷಧ ಸಸ್ಯಗಳ ಉದ್ಯಾನ ಹಾಗೂ ಮೀನು ಸಾಕಾಣಿಕೆ ತೊಟ್ಟಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
‘ಪ್ರತಿ ತಿಂಗಳ ಮೂರನೇ ಶನಿವಾರ ಸ್ವಚ್ಛತಾ ಕಾರ್ಯಗಳ ಜತೆಗೆ ಸಮುದಾಯದ ಮಟ್ಟದಲ್ಲಿ ಸ್ವಚ್ಛತೆಯ ಮಹತ್ವ ಬಿಂಬಿಸುವ ಬಗ್ಗೆ ಕಿರು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.