ಬೆಳಗಾವಿ : ಸೆಪ್ಟೆಂಬರ್ 17: ದೃಶ್ಯ ನ್ಯೂಸ್ : ವಿಶ್ವಕರ್ಮ ನಿಗಮ ಸ್ಥಾಪನೆ ಮತ್ತು ವಿಶ್ವಕರ್ಮ ಜಯಂತಿ ಆಚರಣೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ರವಿವಾರ (ಸೆ.17) ರಂದು ಏರ್ಪಡಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ಕರ್ಮ ಸಮಾಜ ಹಿಂದುಳಿದ ಸಮಾಜ ಎನ್ನುವ ಭಾವನೆ ಯಾರಿಗೂ ಬೇಡ. ಪ್ರಪಂಚವನ್ನು ಭೂ ಪುಟದಲ್ಲಿ ದಾಖಲಿಸಿದವರೇ ವಿಶ್ವಕರ್ಮರು. ಏನನ್ನೇ ಕೊಟ್ಟರೂ ಕಸದಿಂದ ರಸ ತಯಾರಿಸುವವರು ವಿಶ್ವಕರ್ಮರು. ವಿಶ್ವಕರ್ಮ ಸಮಾಜವನ್ನು ಮುನ್ನೆಲೆಗೆ ತರುವಲ್ಲಿ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಸರಕಾರವನ್ನು ಹಾಗೂ ಮುಖ್ಯಮಂತ್ರಿಗಳನ್ನು ಸ್ಮರಿಸಬೇಕು. ಉಪಕಾರ ಮಾಡಿದವರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯ ಎಂದರು.
ಇಡೀ ವಿಶ್ವವನ್ನು ವಿಶ್ವದ ಪುಟದಲ್ಲಿ ಚಿತ್ರೀಕರಣ ಮಾಡಿದ ಬ್ರಹ್ಮ ವಿಶ್ವಕರ್ಮ ಹೀಗೇ ವಿಶ್ವ ಕರ್ಮ ಸಮುದಾಯ ಜಗತ್ತು ಸುಂದರವಾಗಿ ಕಾಣಲು ಸುಂದರ ವಸ್ತುಗಳನ್ನು ಕೊಡುವುದರ ಜೊತೆಗೆ ತಮ್ಮ ಜೀವನವನ್ನು ಸಹ ಸುಂದರವಾಗಿಸಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ವಿಶ್ವಕರ್ಮ ಸಮಾಜ ಕಸದಿಂದ ರಸಗಳನ್ನು ಮಾಡಿ, ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಒಡವೆ ಆಭರಣ, ರೈತರ ಸಲಕರಣೆ ಕೊಡುವುದರ ಜೊತೆಗೆ ತಮ್ಮ ಜೀವನವನ್ನು ವಿವಿಧ ಕ್ಷೇತ್ರಗಳಲ್ಲಿಯೂ ಸಹ ಅಭಿವೃದ್ಧಿಗೊಳಿಸಿಕೊಳ್ಳಬೇಕು. ಪ್ರತಿ ದಿನ ಸಮಾಜ ನಿಮ್ಮನ್ನು ನೆನೆಸುವಂತಹ ರೀತಿಯಲ್ಲಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಕಾರ್ಯಕ್ಕೆ ನಾವೆಲ್ಲ ಋಣಿಯಾಗಿದ್ದೇವೆ ಎಂದರು.
ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ರಾಜ್ಯದ ಜನರಿಗೆ, ಮಹಿಳೆಯರಿಗೆ ಸಾಕಷ್ಟು ಕೊಡುಗೆಗಗಳನ್ನು ನೀಡಿದೆ. ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಮೂಲಕ ಪ್ರತಿ ಮನೆ ಮನೆಗೆ ನೆರವಾಗುವ ಕೆಲಸವನ್ನು ಮಾಡಿದ್ದೇವೆ ಎಂದು ಈ ಸಂದರ್ಭದಲ್ಲಿ ವಿವರಿಸಿದರು.