ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು ಇವರ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಎರ್ಮಾಳು ಶ್ರೀ ಜನಾರ್ದನ ಜನಕಲ್ಯಾಣ ಸಭಾ ಭವನದಲ್ಲಿ ಜರುಗಿದ 1694 ನೇ ಮದ್ಯವರ್ಜನ ಶಿಬಿರ ನಡೆಯಿತು
ಶಿಬಿರವನ್ನು ಎರ್ಮಾಳು ಬೀಡು ಅಶೋಕ್ ರಾಜ್ ಉದ್ಘಾಟಿಸಿ ಮಾತನಾಡಿದರು , ವ್ಯಸನ ಮುಕ್ತ ಜೀವನದಿಂದ ಮನುಷ್ಯನಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಲಭಿಸುತ್ತದೆ. ಶಿಬಿರದಲ್ಲಿ ಪಾಲ್ಗೊಂಡವರು ಸ್ವಪ್ರೇರಣೆಯಿಂದ ವ್ಯಸನಮುಕ್ತರಾಗಿ ಜೀವನ ನಡೆಸಿದಲ್ಲಿ ಅದುವೇ ನೀವು ಶಿಬಿರ ಆಯೋಜಕರಿಗೆ ನೀಡುವ ದೊಡ್ಡ ಗೌರವವಾಗಿರುತ್ತದೆ ಎಂದರು.
ಶಿಬಿರದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ, ವ್ಯಸನ ಮುಕ್ತ ಸಮಾಜದ ನಿರ್ಮಾಣವೇ ಶಿಬಿರದ ಉದ್ದೇಶವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಗೊಂಡ ಮದ್ಯವರ್ಜನ ಶಿಬಿರ ಇಂದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ. ಈವರೆಗೆ 1694 ಶಿಬಿರಗಳು ನಡೆದಿದ್ದು ಈವರೆಗೆ 1.23 ಲಕ್ಷ ಜನರನ್ನು ವ್ಯಸನ ಮುಕ್ತರನ್ನಾಗಿಸಲಾಗಿದೆ.
ಉಚ್ಚಿಲ – ಎರ್ಮಾಳು ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಮೊಯ್ಲಿ ಅಧ್ಯಕ್ಷತೆ ವಹಿಸಿದ್ದರು.
ತೆಂಕ ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಪ್ರವೀಣ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಜನಜಾಗೃತಿ ವೇದಿಕೆ ಮಾಜಿ ರಾಜ್ಯಾಧ್ಯಕ್ಷ ದೇವದಾಸ ಹೆಬ್ಬಾರ್, ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ, ಮಾಜಿ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ತಾಲೂಕು ಅಧ್ಯಕ್ಷ ಸತ್ಯಾನಂದ ನಾಯಕ್, ಬೆಳ್ಮಣ್ ವಲಯ ಅಧ್ಯಕ್ಷ ಶಂಕರ ಕುಂದರ್ ಸೂಡಾ ಮೊದಲಾದವರು ಉಪಸ್ಥಿತರಿದ್ದರು ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಪ್ರಸ್ತಾವನೆಗೈದರು. ಸಮಿತಿ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತ ಮತ್ತು ಸಂಶೋಧನ ಕೇಂದ್ರ ಉಜಿರೆ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜನಾರ್ದನ ಜನಕಲ್ಯಾಣ ಸೇವಾ ಸಮಿತಿ ಎರ್ಮಾಳು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಉಚ್ಚಿಲ ವಲಯ, ತೆಂಕ ಗ್ರಾಮ ಪಂಚಾಯತ್, ನವಜೀವನ ಸಮಿತಿ, ಕಾಪು ತಾಲೂಕು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳು ಉಚ್ಚಿಲ ವಲಯ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮದ್ಯವರ್ಜನ ಶಿಬಿರವನ್ನು ಆಯೋಜಿಸಲಾಯಿತು.