ಉಡುಪಿ: ಮಾರ್ಚ್ 27: ರಸ್ತೆ ಅಪಘಾತದಲ್ಲಿ ಮಗ ಮೃತಪಟ್ಟ ಸುದ್ದಿ ತಿಳಿದು ಕೋಮಾಕ್ಕೆ ಜಾರಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ಶಿರ್ವ ಕೊಲ್ಲಬೆಟ್ಟು ಬಳಿ ಮಾ. 26ರಂದು ನಡೆದಿದೆ.
ಶಿರ್ವದ ಕೊಲ್ಲಬೆಟ್ಟು ನಿವಾಸಿ ರಮೇಶ್ ಮೂಲ್ಯ (51) ಅಪಘಾತದಲ್ಲಿ ಮೃತ ವ್ಯಕ್ತಿ. ಇಂದಿರಾ ಮೂಲ್ಯ (74) ಪುತ್ರನ ಸಾವಿನ ಸುದ್ದಿ ತಿಳಿದು ಆಘಾತದಿಂದ ಸಾವನ್ನಪ್ಪಿದ ಮಹಿಳೆ.
ಮಾ.23 ರಂದು ರಮೇಶ್ ಬಂಟಕಲ್ಲಿನಿಂದ ಬಿ ಸಿ ರೋಡ್-ಪಾಂಬೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್ನಲ್ಲಿ ತೆರಳುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ಬಂದ ಕಾರು ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಮೇಶ್ ಮೂಲ್ಯ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.24 ರಂದು ರಾತ್ರಿ ಅವರು ಮೃತಪಟ್ಟಿದ್ದರು.
ಬಳಿಕ ಮೃತಪಟ್ಟ ರಮೇಶ್ ಅವರ ಮೃತ ದೇಹವನ್ನು ಅವರ ಅಂತಿಮ ಸಂಸ್ಕಾರಕ್ಕಾಗಿ ಮಂಗಳವಾರ ಶಿರ್ವ ಕೊಲ್ಲಬೆಟ್ಟುವಿನ ಮನೆಗೆ ತರಲಾಗಿತ್ತು. ಪುತ್ರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಗೊಂಡ ತಾಯಿ ಇಂದಿರಾ ಮೂಲ್ಯ ತೀವ್ರ ಅಸ್ವಸ್ಥರಾಗಿ ಕೋಮಾಕ್ಕೆ ಜಾರಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕೇವಲ ಒಂದು ದಿನದ ಅಂತರದಲ್ಲಿ ತಾಯಿ- ಮಗ ಇಬ್ಬರೂ ಮೃತಪಟ್ಟಿದ್ದು, ಮೃತರ ಕುಟುಂಬವು ದುಃಖಿತವಾಗಿದೆ.