ಮಂಡ್ಯ, ಮಾರ್ಚ 25: ಸೋಮವಾರ ಮಾರ್ಚ್ 23ರಂದು ರಾತ್ರಿ ಏಕಾಏಕಿ ಕೃಷ್ಣರಾಜ ಸಾಗರ ಜಲಾಶಯದ +80 ಗೇಟ್ ತೆರೆದಿದ್ದು ಸೋಮವಾರ ರಾತ್ರಿವರೆಗೂ ಗೇಟ್ ತೆರದೇ ಇದ್ದ ಪರಿಣಾಮ 24 ಗಂಟೆಯಲ್ಲಿ ಬರೋಬ್ಬರಿ ಎರಡು ಸಾವಿರ ಕ್ಯೂಸೆಕ್ ನೀರು ನದಿ ಪಾಲಾಗಿದೆ. ಸೋಮವರಾರ ರಾತ್ರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ.
ಈ ವೇಳೆ, ಹೆಚ್ಚಿನ ಪ್ರಮಾಣದ ನೀರು ಇದ್ದಿದ್ದರಿಂದ ಗೇಟ್ ಮುಚ್ಚಲು ಅಧಿಕಾರಿಗಳು ಹರಸಾಹಸ ಪಟ್ಟರು.ಡ್ಯಾಂನ ಗೇಟ್ನ ಮೋಟಾರ್ ರಿವರ್ಸ್ ಆಗಿದ್ದರಿಂದ ಗೇಟ್ ತೆರೆದಿರಬಹುದು, ಅಥವಾ ನಮ್ಮದೇ ಸಿಬ್ಬಂದಿ ಗೇಟ್ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಗೇಟ್ ಯಾವ ಕಾರಣಕ್ಕೆ ತೆರೆದಿದೆ ಎಂಬುವುದು ತನಿಖೆ ಬಳಿಕವಷ್ಟೇ ತಿಳಿಯಲಿದೆ.
ಡ್ಯಾಂನ ಗೇಟ್ ಏಕಾಏಕಿ ತೆರೆದ ವಿಚಾರ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದು, ಪರಿಶೀಲನೆ ನಡೆಸಲಿದ್ದಾರೆ. ಗೇಟ್ ಏಕಾಏಕಿ ಹೇಗೆ ತೆರೆಯಿತು ಅಂತ ತನಿಖೆ ನಡೆಸಲು ಪೂರಕವಾದ ಸಾಕ್ಷ್ಯಾಧಾರಗಳು ಅತ್ಯಗತ್ಯ. ಆದರೆ, ಡ್ಯಾಂನ ಸುತ್ತಮುತ್ತ ಯಾವುದೇ ಸಿಸಿ ಕ್ಯಾಮೆರಾಗಳು ಇಲ್ಲ. ಇದರಿಂದ ತನಿಖೆ ನಿಧಾನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ