ಮಲ್ಪೆ: ಮಾರ್ಚ್ 20:ಮಲ್ಪೆ ಯಲ್ಲಿ ಮಹಿಳೆ ಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ಸಾಕಷ್ಟು ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕ್ಕೆ ಕಾರಣ ವಾಗಿತ್ತು ಇದೀಗ ಈ ಪ್ರಕರಣದಲ್ಲಿ ಆರೋಪಿತರಾದ ಶ್ರೀಮತಿ ಲಕ್ಷ್ಮೀ, ಶಿಲ್ಪ ಮತ್ತು ಸುಂದರ್ ರವರನ್ನು ಬಂದಿಸಲಾಗಿದೆ ಹಾಗೂ ಇನ್ನೋರ್ವ ಶಂಕಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ವಿಜಯನಗರ ಜಿಲ್ಲೆ ದೂರುದಾರೆ ಸುಮಾರು 5 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿರುವ ಮೀನನ್ನು ಬುಟ್ಟಿಯಲ್ಲಿ ತುಂಬಿಸಿ ಹೊರುವ ಕೆಲಸ ಮಾಡಿಕೊಂಡಿರುತ್ತಾರೆ.
ದಿನಾಂಕ 18-03-2025 ರಂದು ಬೆಳಿಗ್ಗೆ ಸುಮಾರು 6:00 ಗಂಟೆ ಸಮಯಕ್ಕೆ ಮಲ್ಪೆ ಬಂದರಿನಲ್ಲಿ ಶ್ರೀ ಆರಾಧನ ಬೋಟ್ ನಿಂದ ಮೀನು ಖಾಲಿ ಮಾಡಿ ಒಂದು ಬುಟ್ಟಿಯಲ್ಲಿ ಸಿಗಡಿ (ಚಟ್ಲಿ) ಮೀನನ್ನು ತಲೆಯ ಮೇಲೆ ಹೊತ್ತುಕೊಂಡು ಪದಾರ್ಥಕ್ಕೆಂದು ಕೊಂಡು ಹೋಗಿದ್ದು, ಇದರಿಂದ ಕೋಪಗೊಂಡ ಬಂದರಿನಲ್ಲಿ ಮೀನು ಮಾರಾಟ ಮಾಡುವ ಶ್ರೀಮತಿ ಲಕ್ಷ್ಮೀ, ಶಿಲ್ಪ, ಆರಾಧನ ಬೋಟಿನ ಚಂದ್ರ, ಸುಂದರ ಮತ್ತು ಇತರ ಸುಮಾರು ಜನರು ಅಕ್ರಮವಾಗಿ ಸೇರಿಕೊಂಡು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ, ನಮ್ಮ ಊರು ಮಲ್ಪೆಗೆ ಎಲ್ಲಿಂದಲೋ ಬಂದು ನಮ್ಮ ಮೀನು ಕೊಂಡು ಹೋಗುತ್ತೀಯ ಎಂದು ಅವಾಚ್ಯವಾಗಿ ಬೈದು ಅವರೆಲ್ಲ ಸೇರಿ ಮೈಮೇಲೆ ಕೈಹಾಕಿ ಎಳೆದಾಡಿ ಬಳಿಕ, ಅಲ್ಲಿನ ಒಂದು ಮರಕ್ಕೆ ಹಗ್ಗದಿಂದ ಕಟ್ಟಿಹಾಕಿ ಲಕ್ಷ್ಮೀ ಮತ್ತು ಸುಂದರ ಇವರು ಕೈಯಿಂದ ಕೆನ್ನೆಗೆ, ಮೈಮೇಲೆ ಹೊಡೆದು ನೋವುಂಟು ಮಾಡಿರುವುದಾಗಿದೆ.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ :32/25ಕಲಂ.189(2),191(2),126(2),127(2),74,115(2),352,351(2),190 ಬಿಎನ್ಎಸ್ ಹಾಗೂ 3(1)(r),3(1)(s),3(2)(v-a)ಎಸ್ಸಿ ಮತ್ತು ಎಸ್ಟಿ ಕಾಯಿದೆ 1989ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಡಿಯೋ ಹಾಗೂ ಇತರ ಸಾಕ್ಷಿಗಳನ್ನು ಪರಿಶೀಲಿಸಿ, ಮುಂದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.