ಕಾರ್ಕಳ:ಮಾರ್ಚ್ 08:ಕಾರ್ಕಳ ವ್ಯಾಪ್ತಿಯಲ್ಲಿ ಅನಧಿಕೃತ ಪತ್ರಕರ್ತರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಹಾಗೂ ಅವರ ವಾಹನಗಳಲ್ಲಿ ಮೀಡಿಯಾ ಸ್ಟಿಕ್ಕರ್ ಬಳಕೆ ಮಾಡದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಮಾ. 8ರಂದು ದೂರು ನೀಡಿದೆ.
ಕೆಲವೊಂದು ಯೂಟ್ಯೂಬರ್ಸ್ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವವರು ತಾವು ಪತ್ರಕರ್ತರು ಎಂದು ಹೇಳಿಕೊಂಡು ಸರಕಾರಿ ಅಧಿಕಾರಿಗಳು, ಪೊಲೀಸರು ಹಾಗೂ ಜನಪ್ರತಿನಿಧಿಗಳ ಬಳಿ ಮಾಹಿತಿ ಪಡೆದು, ವ್ಯವಹಾರಸ್ಥರಿಗೆ ಬೆದರಿಸುವ ತಂತ್ರಗಾರಿಕೆ ನಡೆಯುತ್ತಿದ್ದು,
ಪತ್ರಕರ್ತರೆಂದು ತಿರುಗಾಡುವ ನಕಲಿ ಪತ್ರಕರ್ತರು, ಯೂಟ್ಯೂಬರ್ಸ್ಗಳು ಹಾಗೂ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುವವರು ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಬಗ್ಗೆ ಸಂಘಕ್ಕೆ ದೂರು ಬಂದಿರುತ್ತದೆ.
ಅಲ್ಲದೆ ಆರ್ಎನ್ಐ ಅಥವಾ ಟ್ರಾಯ್ನ ಅಡಿಯಲ್ಲಿ ನೋಂದಾವಣೆಯಾದ ಮುದ್ರಣ ಮಾಧ್ಯಮ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಅಧಿಕೃತ ಪತ್ರಕರ್ತರಿಗೆ ಮಾತ್ರ ವಾಹನಗಳಲ್ಲಿ ಹಾಗೂ ಗುರುತಿನ ಚೀಟಿಗಳಲ್ಲಿ ಮೀಡಿಯಾ ಎಂಬ ಪದವನ್ನು ಅಳವಡಿಸಬಹುದಾಗಿದೆ. ಆದರೆ ಇಂದು ಯೂಟ್ಯೂಬರ್ಸ್ ಎಂಬ ನಕಲಿ ಪತ್ರಕರ್ತರು ಮೀಡಿಯಾ ಸ್ಟಿಕ್ಕರ್ನ್ನು ದುರುಪಯೋಗ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ಸಲ್ಲಿಸಲಾಯಿತು.
ಈ ಬಗ್ಗೆ ಕಾರ್ಕಳ ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಿಗೆ ಪರೀಕ್ಷಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಷರೀಫ್, ಉಪಾಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ಜಿಲ್ಲಾ ಸಮಿತಿ ಸದಸ್ಯರಾದ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ, ಜತೆ ಕಾರ್ಯದರ್ಶಿ ವಾಸುದೇವ ಭಟ್, ಕೋಶಾಧಿಕಾರಿ ಕೆ.ಎಂ. ಖಲೀಲ್, ಸದಸ್ಯರಾದ ರಮಾನಂದ ಅಜೆಕಾರು, ಹರಿಪ್ರಸಾದ್ ನಂದಳಿಕೆ, ಸತೀಶ್ ಶೆಟ್ಟಿ, ಸಂಪತ್ ನಾಯಕ್ ಉಪಸ್ಥಿತರಿದ್ದರು.