ಕಾಪು : ಮಾರ್ಚ್ 06:ಸಂಪೂರ್ಣ ಶಿಲಾಮಯವಾಗಿ, ಅದ್ಭುತವಾಗಿ ನಿರ್ಮಾಣಗೊಂಡಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ. 25ರಿಂದ ಮಾ. 5ರ ವರೆಗೆ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಬುಧವಾರದಂದು ಶ್ರೀ ಮಾರಿಯಮ್ಮನ ದೇವರಿಗೆ ಮಹಾಬ್ರಹ್ಮಕಲಶಾಭಿಷೇಕ ನಡೆಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.
ಪವಿತ್ರ ಬ್ರಹ್ಮಕಲಶೋತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ನೆರೆದಿದ್ದರು. ವೇದಮೂರ್ತಿ ಕೆ.ಜಿ.ರಾಗವೇಂದ್ರ ತಂತ್ರಿ ಅವರ ಮಾರ್ಗದರ್ಶನದಲ್ಲಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ಹಾಗೂ ಇತರ ಅರ್ಚಕರ ನೇತೃತ್ವದಲ್ಲಿ ಮಹಾ ಬ್ರಹ್ಮಕಲಶಾಭಿಷೇಕ ನಡೆಯಿತು.
ಒಂದು ಚಿನ್ನದ ಕೆತ್ತಿದ ಬೆಳ್ಳಿ ಬ್ರಹ್ಮಕಲಶ, ಒಂಬತ್ತು ಬೆಳ್ಳಿ ಬ್ರಹ್ಮಕಲಶ, ಒಂಬತ್ತು ಬೆಳ್ಳಿ ದ್ರವ್ಯ ಕಲಶ, 88 ಬೆಳ್ಳಿ ಕಲಶ, ಮತ್ತು 901 ತಾಮ್ರ ಕಲಶಗಳು ಸೇರಿದಂತೆ ಒಟ್ಟು 1,008 ಕಲಶಗಳನ್ನು ವಿತರಿಸಲಾಯಿತು. ದೇವಾಲಯವು ಹೂವುಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿತ್ತು ಮತ್ತು 50,000 ಕ್ಕೂ ಹೆಚ್ಚು ಭಕ್ತರು ಮಾರಿಯಮ್ಮ ದೇವಿಯ ಆಶೀರ್ವಾದವನ್ನು ಪಡೆದರು.
ಈ ಸಂದರ್ಭದಲ್ಲಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಅವರು ಕೆ. ವಾಸುದೇವ್ ಶೆಟ್ಟಿ ಅವರಿಗೆ ‘ರಾಜಋಷಿ’ ಬಿರುದನ್ನು ಪ್ರದಾನ ಮಾಡಿದರು. ನವನೀತ್ ಶೆಟ್ಟಿ ಬರೆದಿರುವ “ಮಾರಿಯಮ್ಮ” ಪುಸ್ತಕವನ್ನು ಕೆ ವಾಸುದೇವ್ ಶೆಟ್ಟಿ ಬಿಡುಗಡೆ ಮಾಡಿದರು. ಮಹಾ ಬ್ರಹ್ಮಕಲಶಾಭಿಷೇಕದ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ಊಟ, ಬೆಳಗ್ಗೆ ಮತ್ತು ಸಂಜೆ ಉಪಾಹಾರ ಸಹಿತವಾಗಿ ಅನ್ನಪ್ರಸಾದ ಮತ್ತು ಉಪಾಹಾರದ ವ್ಯವಸ್ಥೆ ಇದ್ದು, ಈವರೆಗೆ ಎರಡು ಲಕ್ಷಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಪಂಕ್ತಿ ಊಟ ಮತ್ತು ಬಫೆ ಊಟದ ವ್ಯವಸ್ಥೆಯೊಂದಿಗೆ ಒಂದಿನಿತೂ ಲೋಪವಿಲ್ಲದಂತೆ ಎಷ್ಟು ಮಂದಿ ಬಂದರೂ ಅನ್ನಪ್ರಸಾದ ವಿತರಣೆ ನಡೆದಿದೆ.
ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ ಶ್ರೀ ದೇವಿ ಯ ದರ್ಶನ ಪಡೆದುಕೊಂಡು ಪುನೀತಾರಾದರು