ಉಡುಪಿ:ಮಾರ್ಚ್ 03:ಜಿಲ್ಲೆಯ ಹಿರಿಯ ಪತ್ರಿಕಾ ವಿತರಕರಲ್ಲೊಬ್ಬರಾದ ‘ಭಜನಾ ಸಾಧಕ’ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಶೆಟ್ಟಿ ನೂಜಿನಬೈಲು, ಪೇತ್ರಿ (72 ವರ್ಷ) ಅವರು ಫೆ.3ರಂದು ಮುಂಜಾನೆ ವೃತ್ತಿ ನಿರತರಾಗಿದ್ದ ಸಂದರ್ಭದಲ್ಲಿ ಕುಂಜಾಲು ರಾ.ಹೆ. ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
ಸರಳ, ಸಜ್ಜನಿಕೆಯ, ಸ್ನೇಹಮಯ ವ್ಯಕ್ತಿತ್ವದ ಹಿರಿಯ ಭಜಕರಾಗಿದ್ದ ಬಾಲಕೃಷ್ಣ ಶೆಟ್ಟಿ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನಿಕಟಪೂರ್ವ ಅಧ್ಯಕ್ಷರಾಗಿದ್ದು, ಪ್ರಸಕ್ತ ಬ್ರಹ್ಮಾವರ ತಾಲೂಕು ಭಜನಾ ಪರಿಷತ್ತಿನ ಗೌರವಾಧ್ಯಕ್ಷರಾಗಿ, ಕನ್ನಾರು-ಪೇತ್ರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಹಿರಿಯ ಸದಸ್ಯರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಉಡುಪಿ ತಾಲೂಕು ‘ಭಜನಾ ಸಾಧಕ ಪ್ರಶಸ್ತಿ’ ಪುರಸ್ಕೃತರಾಗಿ ಭಜನಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ಬಂಧು ವರ್ಗ ಹಾಗೂ ಅಪಾರ ಭಜನಾಸಕ್ತ ಬಂಧುಗಳು ಮತ್ತು ಹಿತೈಷಿಗಳನ್ನು ಅಗಲಿದ್ದಾರೆ.
ಬಾಲಕೃಷ್ಣ ಶೆಟ್ಟಿ ನೂಜಿನಬೈಲು ಪೇತ್ರಿ ಅವರ ನಿಧನಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ತೀವ್ರ ಸಂತಾಪ ಸೂಚಿಸಿದೆ.