ಉಡುಪಿ :ಫೆಬ್ರವರಿ 06:ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ನೇತೃತ್ವದಲ್ಲಿ ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಶ್ರೀಮನ್ ಮಧ್ವಾಚಾರ್ಯರ ಅದೃಶ್ಯ ಸನ್ನಿಧಿಯಲ್ಲಿ ಹಾಗೂ ಶ್ರೀ ಕೃಷ್ಣ ಮಠದಲ್ಲಿ ಮಧ್ವನವಮಿ ಉತ್ಸವವನ್ನು ಅತ್ಯಂತ ವೈಭವದಿಂದ ನಡೆಸಲಾಯಿತು.
ಈ ಪ್ರಯುಕ್ತ ಕೃಷ್ಣ ಮಠವನ್ನು ಹಾಗೂ ಅನಂತೇಶ್ವರ ದೇವಾಲಯವನ್ನು ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು .
ಶ್ರೀ ಅನಂತೇಶ್ವರ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯ ಮಧ್ವರ ಸನ್ನಿಧಾನದಲ್ಲಿ ನೂರಾರು ವಿಪ್ರ ಬಾಂಧವರು ಪಾರಾಯಣ ಮಾಡುತ್ತಿರುವಂತೆ, ಪರ್ಯಾಯ ಶ್ರೀಪಾದರು ವಾಯುಸ್ತುತಿ ಪಾರಾಯಣದೊಂದಿಗೆ ಮಧು ಅಭಿಷೇಕವನ್ನು ಮಾಡಿದರು.
ಪುತ್ತಿಗೆ ಉಭಯ ಶ್ರೀಪಾದರು ಮಹಾ ಪೂಜೆಯನ್ನು ಮಾಡಿ ಆಚಾರ್ಯ ಮಧ್ವರಿಗೆ ದಂಡೋದಕವನ್ನು ನೀಡಿದರು.
ಜೊತೆಗೆ ಡಾ ಅರಳು ಮಲ್ಲಿಗೆ ಪಾರ್ಥಸಾರಥಿ ಯವರಿಂದ ವಿಷ್ಣು ಸಹಸ್ರನಾಮ ಚಿಂತನೆ ಮತ್ತು ವಿಪ್ರರಿಂದ ಪಾರಾಯಣ ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ನಡೆಯಿತು.
ಆಚಾರ್ಯ ಮಧ್ವರು ಹನುಮಂತ ದೇವರ ಅವತಾರದ ಹಿನ್ನಲೆಯಲ್ಲಿ ಶ್ರೀ ಕೃಷ್ಣ ಮಠದ ಪ್ರಾಣದೇವರಿಗೆ ಆಚಾರ್ಯ ಮಧ್ವರ ಅಲಂಕಾರವನ್ನು ಸುಂದರ ವಾಗಿ ಮಾಡಲಾಗಿತ್ತು.
ಸಾವಿರಾರು ಮಂದಿ ಈ ವೈಭವವನ್ನು ಕಣ್ತುಂಬಿಕೊಂಡರು.
ಹಾಗೇ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ಪುತ್ತಿಗೆ ಕಿರಿಯ ಶ್ರೀಪಾದರು ಶ್ರೀ ಗೋಪಾಲಕೃಷ್ಣ ಅಲಂಕಾರವನ್ನು ಮಾಡಿ ಆರತಿಯನ್ನು ಬೆಳಗಿದರು. ನಂತರ ಪರ್ಯಾಯ ಶ್ರೀಪಾದರು ಮಹಾ ಪೂಜೆಯನ್ನು ಮಾಡಿದರು.
ಮಧ್ವ ನವಮಿಯ ಪ್ರಯುಕ್ತ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ,ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಹಿತೋಷ್ ಆಚಾರ್ಯ, ರತೀಶ್ ತಂತ್ರಿ, ವಿಷ್ಣು ಮೂರ್ತಿ,ವಿದ್ವಾನ್ ಗೋಪಾಲ ಆಚಾರ್ಯ, ರಮೇಶ್ ಭಟ್ ರವೀಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ತು.ಶಿ.ಮಾ.ಮ ದ ಸದಸ್ಯರು, ಹಾಗು ವಿವಿಧ ಬ್ರಾಹ್ಮಣ ಸಂಘದ ಸದಸ್ಯರು ಮತ್ತು ಊರ ಪರವೂರಿನ ಅನೇಕ ಭಕ್ತರು ಉಪಸ್ಥಿತರಿದ್ದರು.