ಬೆಂಗಳೂರು : ಸೆಪ್ಟೆಂಬರ್ 15:ಸೈಮಾ ಪ್ರಶಸ್ತಿ ಸಮಾರಂಭ ನಿನ್ನೆ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಕನ್ನಡ.. ತೆಲುಗು.. ಮಲಯಾಳಂ ಮತ್ತು ತಮಿಳು ಚಿತ್ರರಂಗದ ಪೈಕಿ ನಿನ್ನೆ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಬಂದ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪಾತ್ರ, ಹೀಗೆ ನಾನಾ ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ.
ಆ ಪೈಕಿ ಸಪ್ತ ಸಾಗರದಾಚೆ ಎಲ್ಲೋ ಅತೀ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಕಾಟೇರ ಕೂಡ ಸೈಮಾ ನೆಲದಲ್ಲಿ ಕಮಾಲ್ ಮಾಡಿದೆ.
ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿನ ಅಭಿನಯಕ್ಕೆ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಇದೇ ಚಿತ್ರದಲ್ಲಿನ ಅಭಿನಯಕ್ಕೆ ರುಕ್ಮಿಣಿ ವಸಂತ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನೂ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಯಲ್ಲಿ ಸುರಭಿ ಪಾತ್ರವನ್ನು ನಿರ್ವಹಿಸಿದ್ದ ಚೈತ್ರಾ ಆಚಾರ್ ಅವರಿಗೆ ಕೂಡ ವಿಮರ್ಷಕರ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ನೀಡಲಾಗಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಪ್ತಸಾಗರದಾಚೆ ಎಲ್ಲೋ ಸೂತ್ರಧಾರ ಹೇಮಂತ್ ರಾವ್ ಪಾಲಾಗಿದೆ. ಅತ್ಯುತ್ತಮ ವಿಲನ್ ಪ್ರಶಸ್ತಿ ಕೂಡ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ರಮೇಶ್ ಇಂದಿರಾ ಅವರಿಗೆ ಸಿಕ್ಕಿದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಶೀರ್ಷಿಕೆ ಗೀತೆಯನ್ನು ಸುಮಧುರವಾಗಿ ಹಾಡಿದ್ದ ಗಾಯಕ ಕಪಿಲ್ ಅವರಿಗೆ ಅತ್ಯುತ್ತಮ ಗಾಯಕ ಪ್ರಶಸ್ತಿ ಸಿಕ್ಕಿದೆ.
ಇನ್ನೂ ಕಾಟೇರಾ ಚಿತ್ರ ಅತ್ಯುತ್ತಮ ಕನ್ನಡ ಚಿತ್ರವಾಗಿ ಹೊರ ಹೊಮ್ಮಿದ್ದು, ಆರಾಧನಾ ಅವರಿಗೆ ಅತ್ಯುತ್ತಮ ಹೊಸ ನಟಿ ಪ್ರಶಸ್ತಿಯನ್ನು ನೀಡಲಾಗಿದೆ. ಪಸಂದಾಗ್ ಅವ್ನೇ ಹಾಡನ್ನು ಹಾಡಿದ್ದ ಮಂಗ್ಲಿ ಅತ್ಯುತ್ತಮ ಗಾಯಕಿ ಎಂದು ಕರೆಸಿಕೊಂಡರೆ, ಈ ಚಿತ್ರದ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನೂ ಟಗರು ಪಲ್ಯ ಚಿತ್ರದಲ್ಲಿನ ಸಾಹಿತ್ಯಕ್ಕೆ ಡಾಲಿ ಧನಂಜಯ್ ಅವರಿಗೆ ಅತ್ಯುತ್ತಮ ಸಾಹಿತಿ ಪ್ರಶಸ್ತಿಯನ್ನು ನೀಡಲಾಗಿದ್ದು, ಗುರುದೇವ ಹೊಯ್ಸಳ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಷಕರ ವಿಭಾಗದಲ್ಲಿ ಡಾಲಿ ಧನಂಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಗಿದೆ
ಹೊಂದಿಸಿ ಬರೆಯಿರಿ ಚಿತ್ರದಲ್ಲಿನ ಅಭಿನಯಕ್ಕೆ ನವೀನ್ ಶಂಕರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದ್ದು, ಟೋಬಿ ಚಿತ್ರದಲ್ಲಿನ ಅಭಿನಯಕ್ಕೆ ಸಂಯುಕ್ತಾ ಹೊರನಾಡು ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅತ್ಯುತ್ತಮ ಹೊಸ ನಿರ್ದೇಶಕ ಪ್ರಶಸ್ತಿಯನ್ನು ಪಡೆದರೆ, ಡೇರ್ ಡೆವಿಲ್ ಮುಸ್ತಫಾ ಚಿತ್ರದ ಶಿಶಿರ್ ಬೈಕಾಡಿ ಅತ್ಯುತ್ತಮ ಹೊಸ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನೂ ಲವ್ ಚಿತ್ರದ ವೃಷಾ ಪಾಟೀಲ್ ಅತ್ಯುತ್ತಮ ಭರವಸೆಯ ನಟಿ ಪ್ರಶಸ್ತಿ ಪಡೆದರೆ, ಕೈವ ಚಿತ್ರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ ಶ್ವೇತ ಪ್ರಿಯ ಅತ್ಯುತ್ತಮ ಸಿನಿಮ್ಯಾಟೋಗ್ರಾಫರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಆಚಾರ್ & ಕೋ ಚಿತ್ರದಲ್ಲಿನ ಅಭಿನಯಕ್ಕೆ ಅನಿರುದ್ಧ್ ಆಚಾರ್ ಅವರಿಗೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ನೀಡಲಾಗಿದ್ದು, ಚಿತ್ರರಂಗಕ್ಕೆ ತಮ್ಮ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಕ್ಕೆ ಡಾ.ಶಿವರಾಜ್ ಕುಮಾರ್ ಅವರಿಗೆ ವಿಶೇಷ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ಇನ್ನೂ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಪ್ರಶಸ್ತಿ ಪಡೆಯಲು ವೇದಿಕೆ ಹತ್ತಿದಾಗ, ಇಡೀ ಸಭಾಂಗಣದಲ್ಲಿದ್ದ ಎಲ್ಲರು ಎದ್ದು ನಿಂತು ಚಪ್ಪಾಳೆ ತಟ್ಟಿ ಶಿವಣ್ಣಗೆ ಗೌರವಿಸಿದ್ದು ಕಾರ್ಯಕ್ರಮದ ವಿಶೇಷ. ಹೀಗೆ ಕನ್ನಡ ಚಿತ್ರರಂಗದ ಪಾಲಿಗೆ ಈ ವರ್ಷ ಸಂಪನ್ನವಾದ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಒಟ್ಟು ಆರು ವಿಭಾಗಗಳಲ್ಲಿ ಪ್ರಶಸ್ತಿ ಪಡೆದರೆ ಕಾಟೇರ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದಿದೆ.