ಮಣಿಪಾಲ: ಸೆಪ್ಟೆಂಬರ್ 11: ಮಣಿಪಾಲದ ಅನಂತನಗರಲ್ಲಿರುವ ಹಿಂದುಳಿದ ವರ್ಗದವರ ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ಕಿಟಕಿಯಿಂದ ಕೈಹಾಕಿ ಮಂಚದಲ್ಲಿ ಮಲಗಿದ್ದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ಮಣಿಪಾಲ ಪೊಲೀಸರು ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಸ್ಥಳೀಯ ನಿವಾಸಿ ನವೀನ್ ನಾಯ್ಕ್(22) ಬಂಧಿತ ಆರೋಪಿ.ಈತ ಸೆ.1ರಂದು ನಸುಕಿನ ವೇಳೆ ಹಾಸ್ಟಲ್ ಗೆ ಅಕ್ರಮ ಪ್ರವೇಶ ಮಾಡಿ ಕೊಠಡಿಯಲ್ಲಿ ಕಿಟಕಿಯಿಂದ ಕೈಹಾಕಿ ಕಿಟಕಿಯ ಬಳಿ ಮಂಚದಲ್ಲಿ ಮಲಗಿದ್ದ ಓರ್ವ ವಿದ್ಯಾರ್ಥಿನಿಗೆ ಕಿರುಕುಳ ನೀಡಿ ಪರಾರಿಯಾಗಿದ್ದ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಎಸ್ಸೈಗಳಾದ ರಾಘವೇಂದ್ರ, ಅಕ್ಷಯ ಕುಮಾರಿ, ಎಎಸ್ಸೈ ವಿವೇಕ್, ಸಿಬ್ಬಂದಿ ಇಮ್ರಾನ್, ಪ್ರಸನ್ನ, ರಘು, ಮಂಜುನಾಥ ಹಾಗೂ ಜ್ಯೋತಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ 2023ರಲ್ಲಿ ಉಡುಪಿ ಪುತ್ತೂರಿನ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.