ಉಡುಪಿ : ಜುಲೈ 20: ಭಾರೀ ಗಾಳಿಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು, ಬೃಹತ್ ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದ ಕೆಮ್ಮಣು ಸಮೀಪದ ಗುಜ್ಜರಬೆಟ್ಟು ಪ್ರದೇಶದಲ್ಲಿ ಹಲವು ತೆಂಗಿನ ಮರಗಳು ಸಮುದ್ರಪಾಲಾಗಿವೆ.
ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಜ್ಜರಬೆಟ್ಟು ಎಂಬಲ್ಲಿ ಕಡಲ ಅಲೆಗಳು ತೀರಕ್ಕೆ ಬಡಿಯುತ್ತಿದ್ದು, ಇಲ್ಲಿನ ಸುಮಾರು ಐದಾರು ತೆಂಗಿನ ಮರಗಳು ಧರೆಗೆ ಉರುಳಿ ಬಿದ್ದು ಕಡಲ ಒಡಲು ಸೇರಿವೆ.
ತಡೆಗೋಡೆಗಾಗಿ ಹಾಕಲಾದ ಬೃಹತ್ ಆಕಾರದ ಕಲ್ಲುಗಳು ಈಗಾಗಲೇ ಸಮುದ್ರಪಾಲಾಗಿವೆ. ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಗುರುರಾಜ್, ಗ್ರಾಪಂ ಅಧ್ಯಕ್ಷ ಕುಸುಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಕಮಿಷನರ್ ರವರು, ಮತ್ತು ತಹಶೀಲ್ದಾರರು ಉಡುಪಿ ತಾಲೂಕಿನ ಗುಜ್ಜರಬೆಟ್ಟು ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.