ಉಡುಪಿ : ಫೆಬ್ರವರಿ 13: ನೀರಿನ ಟ್ಯಾಂಕರ್ ವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಉಡುಪಿ ದೊಡ್ಡಣಗುಡ್ಡೆ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.
ಮೃತರನ್ನು ಎಪಿಎಂ ಸಿಟಿ ಬಸ್ ಚಾಲಕ ಮಂಜುನಾಥ್ (36) ಎಂದು ಗುರುತಿಸಲಾಗಿದೆ. ಇವರು ಇಂದು ಸಂಜೆ ತಮ್ಮ ಸ್ಕೂಟರ್ ನಲ್ಲಿ ಬಾಳಿಗ ಹಾಸ್ಪಿಟಲ್ ದೊಡ್ಡಣಗುಡ್ಡೆಯಿಂದ ಪೆರಂಪಳ್ಳಿಯ ತಮ್ಮ ಬಾಡಿಗೆ ಮನೆಗೆ ಹೋಗುತ್ತಿದ್ದರು.
ಈ ವೇಳೆ ನೀರಿನ ಟ್ಯಾಂಕರ್ ವೊಂದು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಅವರು ತಮ್ಮ ಮಗಳ 2ನೇ ವರ್ಷದ ಹುಟ್ಟುಹಬ್ಬದ ಆಚರಣೆಗಾಗಿ ಕೇಕ್ ಕೊಂಡು ಹೋಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅವರು ಖಾಸಗಿ ಸಿಟಿ ಬಸ್ ಚಾಲಕರಾಗಿದ್ದರು. ಮೃತದೇಹವನ್ನು ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಾದರು.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.