ಉಡುಪಿ, ಜನವರಿ 02: ಸಾಮಾಜಿಕ ನ್ಯಾಯವನ್ನು ಕೇಂದ್ರವಾಗಿ ಇಟ್ಟುಕೊಂಡು ಅಭಿವೃದ್ದಿ ಪಥದ ಬಗ್ಗೆ ಯೋಚನೆ ಮಾಡಬೇಕಾಗಿದೆ. ಅದನ್ನು ಹೊರತು ಪಡಿಸಿದರೆ ನಿಜವಾದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅದು ಕೇವಲ ಅಂಕಿ ಅಂಶಗಳ ಸುಡೋ ಅಭಿವೃದ್ಧಿಯಾಗುತ್ತದೆಂದು ಹಿರಿಯ ಚಿಂತಕ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.
ಜನಶಕ್ತಿ ವಾರ ಪತ್ರಿಕೆಯ ವತಿಯಿಂದ ಉಡುಪಿ ಬಡಗಬೆಟ್ಟು ಸೊಸೈಟಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಜನ ಶಕ್ತಿ ಉತ್ಸವದಲ್ಲಿ ಅವರು ಉಡುಪಿ ಜಿಲ್ಲೆಯ ಅಭಿವೃದ್ಧಿಯ ಪಥ ಕುರಿತು ವಿಚಾರ ಮಂಡಿಸಿದರು.
ಅಭಿವೃದ್ಧಿಯನ್ನು ಶಿಕ್ಷಣ, ಆರೋಗ್ಯ ಹಾಗೂ ಬದುಕಿನ ಗುಣಮಟ್ಟದ ಆಧಾರದ ಮೇಲೆ ಅರ್ಥೈಸಬೇಕಾಗುತ್ತದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಬದುಕಿನ ಗುಣಮಟ್ಟವು ಆಶಾದಾಯಕವಾಗಿಲ್ಲ. ಸಂಸ್ಕೃತಿ ಮತ್ತು ಪ್ರಕೃತಿಯನ್ನು ಬಿಟ್ಟು ನಾವು ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ. ಕೃಷಿಯಲ್ಲಿನ ಸ್ಥಿತ್ಯಂತರ ಎಲ್ಲರದ ಮೇಲೆ ಪ್ರಭಾವ ಬೀರುತ್ತಿದೆ. ಇಲ್ಲಿನ ಮಾತೃ ಪ್ರಧಾನ ಬದಲು ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಗೆ ಬರುತ್ತಿದೆ ಎಂದು ಅವರು ತಿಳಿಸಿದರು.
ಒಂದು ಪ್ರದೇಶದ ಅಭಿವೃದ್ಧಿಗೆ ಖಾಸಗಿಗಿಂತ ಸರಕಾರಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮಹತ್ವವಾಗಿದೆ. ಆದರೆ ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಿಂದ ದೂರವಾಗಿ ಖಾಸಗಿಗೆ ಹೆಚ್ಚು ಪ್ರೋತ್ಸಾಹ ನೀಡುವ ಕಾರ್ಯ ನಡೆಯುತ್ತಿದೆ. ಇದರಿಂದ ಬಡ ಹಿಂದುಳಿದವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ ರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಾವು ಸರಕಾರಿ ವಲಯದ ಶಿಕ್ಷಣ ಸಂಸ್ಥೆ ಗಳನ್ನು ಗಟ್ಟಿಕೊಳ್ಳಿಸಬೇಕಾಗಿದೆ. ಈ ಬಗ್ಗೆ ಹಕ್ಕೋತ್ತಾಯವನ್ನು ಅಗತ್ಯವಾಗಿ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಉಡುಪಿ ಜಿಲ್ಲೆಯ ಪರಿಸರದ ಮೇಲೆ ವಿವಿಧ ಉದ್ಯಮಗಳು ಹಾನಿ ಉಂಟು ಮಾಡುತ್ತಿದೆ. ಇದು ಜಿಲ್ಲೆಯ ಸಮಾತೋಲನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಪರಿಸರ ನಾಶವನ್ನು ತಡೆಗಟ್ಟದಿದ್ದರೆ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಆದುದರಿಂದ ನಾವು ಪರಿಸರ ರಕ್ಷಣೆ ಬಗ್ಗೆ ಪ್ರಾಮಾಣಿಕವಾಗಿ ಚಿಂತನೆ ಮಾಡ ಬೇಕು. ಸಮಾತೋಲನವ ಅಭಿವೃದ್ಧಿಗೆ ಉತ್ತಮ ಪರಿಸರ ಅತೀ ಮುಖ್ಯವಾಗಿದೆ ಎಂದರು.
ಕರಾವಳಿ ಜಿಲ್ಲೆಗಳ ಸೌಹಾರ್ದ ಪರಂಪರೆ ಕುರಿತು ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಇಸ್ಮಾಯಿಲ್ ಎನ್. ಮಾತ ನಾಡಿದರು. ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘದ ಅಧ್ಯಕ್ಷ ಕೆ.ವಿಶ್ವನಾಥ್ ವಹಿಸಿದ್ದರು. ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿ, ಜನಶಕ್ತಿ ಸಂಪಾದಕ ಡಾ.ಕೆ.ಪ್ರಕಾಶ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೀಲಾವತಿ ಉಪಸ್ಥಿತರಿದ್ದರು.
ಎಚ್.ನರಸಿಂಹ ಸ್ವಾಗತಿಸಿದರು. ರಮೇಶ್ ಗುಲ್ವಾಡಿ ಕಾರ್ಯಕ್ರಮ ನಿರೂ ಪಿಸಿದರು. ಕವಿರಾಜ್ ಸಹಕರಿಸಿದರು. ಇದಕ್ಕೂ ಮುನ್ನಾ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ ವೈಜ್ಞಾನಿಕ ಮನೋಭಾವದ ಕುರಿತ ಮಕ್ಕಳ ನಾಟಕ ‘ಜ್ಞಾನ-ವಿಜ್ಞಾನ- ಜಿಂದಾಬಾದ್’ ಪ್ರದರ್ಶನಗೊಂಡಿತು.
ಅವೈದಿಕ ಸಂಸ್ಕೃತಿಯ ಮೇಲೆ ವೈದಿಕ ಸಂಸ್ಕೃತಿ ಸಾಕಷ್ಟು ಪ್ರಭಾವ ಬೀರುತ್ತಿದ್ದು, ಈ ಮೂಲಕ ನಮ್ಮ ಮೇಲೆ ಏಕಸಂಸ್ಕೃತಿಯನ್ನು ತುರುಕುವ ಪ್ರಯತ್ನ ನಡೆಸ ಲಾಗುತ್ತಿದೆ. ಇದು ಅಭಿವೃದ್ಧಿ ಪಥದಲ್ಲಿ ಬಹುದೊಡ್ಡ ತೊಡಕು ಆಗಿದೆ ಎಂದು ಡಾ.ಗಣನಾಥ ಎಕ್ಕಾರು ಹೇಳಿದರು.
ಹಿಂದುಳಿದವರ್ಗದ ಯುವಕರು ಅಭಿವೃದ್ಧಿ ಬಗ್ಗೆ ಯೋಚನೆ ಮಾಡುವ ಬದಲು ಮಠ ಮಂದಿರ, ಸಂಘಟನೆ, ಒಂದು ಧರ್ಮವನ್ನು ಗುರಿಯಾಗಿಟ್ಟು ಕೊಂಡು ಮಾತನಾಡುತ್ತಿದ್ದಾರೆ. ಈ ತೊಡಕಿನಿಂದ ನಾವು ಹೊರ ಬರಬೇಕಾದ ಅಗತ್ಯವಿದೆ. ಇದಕ್ಕೆ ಪರ್ಯಾಯವಾಗಿ ನಮ್ಮ ಮೂಲಸಂಸ್ಕೃತಿಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಅವಶ್ಯಕತೆ ಇದೆ ಎಂದರು.
‘ಪರಿಸರದ ಅಸಮಾತೋಲನವು ಅಭಿವೃದ್ಧಿ ಪಛಥದಲ್ಲಿರುವ ಬಹು ದೊಡ್ಡ ಸವಾಲು ಆಗಿದೆ. ಈ ಬಗ್ಗೆ ಗಂಭೀರವಲಾಗಿ ಯೋಚನೆ ಮಾಡಿ ಪರಿಸರ ಉಳಿಸುವ ಚಳವಳಿ ಮಾಡಬೇಕು. ಕರಾವಳಿ ಸಂಸ್ಕೃತಿಯಲ್ಲಿ ಸೌಹಾರ್ದತೆಗೆ ಪ್ರಧಾನ ಸ್ಥಾನ ಇತ್ತು. ಆದರೆ ಇಂದು ಅದಕ್ಕೂ ಕುತ್ತು ಬರುತ್ತಿದೆ’