ಉಡುಪಿ: ಜನವರಿ 01: ದ್ರಶ್ಯ ನ್ಯೂಸ್ :ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪೀಠಾರೋಹಣದ ಸುವರ್ಣೋತ್ಸವದ ಸ್ಮರಣಿಕೆಯಾಗಿ ಪೂಜ್ಯ ವ್ಯಾಸರಾಜ ಶ್ರೀಪಾದರಿಂದ ಪುತ್ತಿಗೆ ಯಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠದ ಭವ್ಯ ಕಟ್ಟಡ ಸುವರ್ಣ ಸ್ಮೃತಿ ಸೌಧ*ಲೋಕಾರ್ಪಣೆ ನಿನ್ನೆ ಡಿಸೆಂಬರ್ 31 ರಂದು ನೆರವೇರಿತು
ಇಂದಿನ ಕಾಲದಲ್ಲಿ ಅನೇಕ ವಿಶ್ವವಿದ್ಯಾಲಯಗಳು, ಪಾಠಶಾಲೆಗಳು ಸರಕಾರದ ಅಧೀನವಾಗಿ ನಡೆಯುತ್ತಿದ್ದು ಆರ್ಥಿಕ ಬಲದಿಂದ ಬೃಹತ್ ಕಟ್ಟಡಗಳು ಕಂಡುಬಂದರೂ ನಿರೀಕ್ಷಿಸಿದಷ್ಟು ಫಲಗಳು ಸಮಾಜಕ್ಕೆ, ದೇಶಕ್ಕೆ ದೊರಕುತ್ತಿಲ್ಲ. ಆದರೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಪುತ್ತಿಗೆಯಂತಹ ಹಳ್ಳಿಯಲ್ಲಿ ನಡೆಸುತ್ತಿರುವ ವಿದ್ಯಾಪೀಠದಿಂದ ಹೊರಬಂದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲೂ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆಂದು ಸೋಸಲೆ ವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣಮಠದಲ್ಲಿ ಜ. 18ರಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಪೀಠಾರೋಹಣದ ಸುವರ್ಣ ಮಹೋತ್ಸವದ ಅಂಗವಾಗಿ ಹಿರಿಯಡಕ ಸಮೀಪದ ಪುತ್ತಿಗೆ ಮೂಲ ಮಠದ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳ ಅನುಕೂಲಕತೆಗಾಗಿ ನಿರ್ಮಿಸಿದ ಸುವರ್ಣ ಸ್ಮತಿಸೌಧವನ್ನು ರವಿವಾರ ಸೋಸಲೆ ವ್ಯಾಸರಾಜ ಮಠಾಧೀಶರು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು
ಅಧ್ಯಕ್ಷತೆಯನ್ನು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ವಹಿಸಿದ್ದರು. ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ|ಮೂ| ಪಿ.ಎಸ್.ದಿನೇಶಕುಮಾರ್ ಶುಭ ಕೋರಿದರು. ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವಿದ್ವಾಂಸರಾದ ಬೆಂಗಳೂರಿನ ಚತುರ್ವೇದಿ ವೇದವ್ಯಾಸಾಚಾರ್, ಕಾಸರಗೋಡಿನ ರವೀಶ್ ತಂತ್ರಿ ಕುಂಟಾರು, ಮಂಗಳೂರು ಶಾರದಾ ಸಮೂಹ ವಿದ್ಯಾಲಯದ ಅಧ್ಯಕ್ಷ ಪ್ರೊ|ಎಂ.ಬಿ.ಪುರಾಣಿಕ್, ಪುತ್ತೂರಿನ ಡಾ|ಪಿ.ಜೆ.ಬಾಲಕೃಷ್ಣ ಮೂಡಂಬಡಿತ್ತಾಯ, ಉಜಿರೆಯ ಡಾ|ದಯಾಕರ್, ಅ.ಕ.ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಬೆಂಗಳೂರಿನ ಬಿ.ಎಸ್.ರಾಘವೇಂದ್ರ ಭಟ್, ಅಮೆರಿಕದ ದಂಡತೀರ್ಥ ಸೀತಾರಾಮ ಭಟ್, ಸಾರಿಗೆ ಉದ್ಯಮಿ ಕೃಷ್ಣಾನಂದ ಚಾತ್ರ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ನಿವೃತ್ತ ಪ್ರಾಂಶುಪಾಲ ಡಾ|ಮಧುಸೂದನ ಭಟ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪುತ್ತಿಗೆ ವಿದ್ಯಾಪೀಠದ ಪ್ರಾಂಶುಪಾಲ ಸುನಿಲ್ ಆಚಾರ್ಯ ಸ್ವಾಗತಿಸಿ, ಅಮೆರಿಕದ ನ್ಯೂಜೆರ್ಸಿ ಶ್ರೀಕೃಷ್ಣ ವೃಂದಾವನದ ಪ್ರಧಾನ ಅರ್ಚಕ ಯೋಗೀಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಪಾದರ ಆಪ್ತ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು. ವಿದ್ವಾಂಸ ಡಾ|ಗೋಪಾಲಾಚಾರ್ಯ ಪ್ರಸ್ತಾವನೆಗೈದರು.